ಗಾಯಕ ಕೆ.ಯುವರಾಜ್‌ ಅವರಿಗೆ ಕೆ.ಆರ್‌.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ

ಗಾಯಕ ಕೆ.ಯುವರಾಜ್‌ ಅವರಿಗೆ ಕೆ.ಆರ್‌.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ

ಶಿವಮೊಗ್ಗ | 23 ಅಕ್ಟೋಬರ್ 2022 | ಡಿಜಿ ಮಲೆನಾಡು.ಕಾಂ

ಅನುಭಾವ ಮಾತಿಗೆ ನಿಲುಕದ ಸ್ಥಿತಿ, ಆನಂದ ಭಾವನೆ. ತೃಪ್ತಿ ಎಂತಲೂ ಕರೆಯಬಹುದು. ಅನುಭಾವ ಎನ್ನುವುದು ನಾವು ಅನುಭವಿಸುವ ವಿಶೇಷ ತೃಪ್ತಿಕರ ಭಾವ ಎಂದು ನಾಡೋಜ ಡಾ. ಗೊ.ರು.ಚನ್ನಬಸಪ್ಪ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಚಾರ ಸಂಕಿರಣ ಹಾಗೂ ಶ್ರೀಮತಿ ನಾಗರತ್ನಮ್ಮ ಶ್ರೀ ವೈ.ಆರ್.ಪರಮೇಶ್ವರಪ್ಪ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಮೌಲ್ಯ ಅರ್ಥವಾಗಬೇಕಾದರೆ ಮಗುವಿನ ಭಾವನೆ ನಮ್ಮಲ್ಲಿ ಬರಬೇಕು. ಮಗುವಿನಲ್ಲಿ ತಾರತಮ್ಯ ಇಲ್ಲ. ಜಾತಿ, ಧರ್ಮ ಭೇದವಿಲ್ಲ. ಮಗುವಿನ ಮುಗ್ಧ ಮನಸ್ಥಿತಿ ಅನುಭಾವ ನೀಡುತ್ತದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ ಮಾತನಾಡಿ, ಶರಣರ ತತ್ವ, ಆದರ್ಶ ಹಾಗೂ ಮಾರ್ಗದರ್ಶನ ಎಲ್ಲ ಕಾಲಕ್ಕೂ ಪ್ರಸ್ತುತ. ಶಿವಮೊಗ್ಗ ಶರಣ ಸಾಹಿತ್ಯ ಪರಿಷತ್‌ ಶರಣರ ತತ್ವ ಆದರ್ಶಗಳನ್ನು ಎಲ್ಲರಿಗೂ ತಲುಪಿಸಲು ಅತ್ಯಂತ ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಗಾಯಕ ಯುವರಾಜ ಅವರು ಜಾನಪದ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ್ದು, ಯುವಪೀಳಿಗೆಗೆ ಮಾದರಿಯಾಗಿದ್ದಾರೆ. ಇಂದಿನ ಯುವಪೀಳಿಗೆಯು ಜಾನಪದ ಹಾಗೂ  ವಚನ ಸಂದೇಶಗಳು ನೀಡುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಬಸವಕೇಂದ್ರದ ಡಾ.  ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಮನುಷ್ಯ ತಂತ್ರಜ್ಞಾನವನ್ನು ಪೂರಕವಾಗಿ ಬಳಸಿ‌ ಕೊಳ್ಳಬೇಕೆ ಹೊರತು ಅದನ್ನು ಮೀತಿಮೀರಿ ಬಳಸಬಾರದು. ಹಾಗೇ ಆದಲ್ಲಿ ಮನುಷ್ಯನ ಸಂವೇದನೆಗಳು ಕಳೆದುಹೋಗಿಬಿಡುತ್ತವೆ. ಅತಿಯಾದ ತಂತ್ರಜ್ಞಾನ ಮಾನವ ಸಂಬಂಧಗಳನ್ನು ಸಡಿಲಗೊಳಿಸಿ ಬದುಕನ್ನು ಅಸಹನೀಯಸುತ್ತದೆ. ಮನುಷ್ಯ ತನ್ನ ಸಂವೇದನೆಗಳನ್ನು ಕಳೆದುಕೊಳ್ಳದೇ ಜಾನಪದರ ಸರಳ ಸ್ಪಂದನಶೀಲ ಬದುಕನ್ನು ರೂಪಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಕೆ.ಆರ್‌.ಲಿಂಗಪ್ಪ, ಕೆ.ಯುವರಾಜ ಸೇರಿದಂತೆ ಅನೇಕರು ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆಗಳನ್ನು ಶ್ರೀಮಂತ ಗೊಳಿಸುತ್ತಿದ್ದಾರೆ. ಗಾಯಕ ಕೆ.ಯುವರಾಜ್‌ ಅವರು ಜಾನಪದ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ತಿಳಿಸಿದರು.

ನನಗೆ ಸಿಕ್ಕಿರುವ ಪ್ರಶಸ್ತಿ ಅರ್ಪಣೆ ಆಗಬೇಕಿರುವುದು ನನ್ನ ತಂದೆ ತಾಯಿಯ ಪಾದಗಳಿಗೆ. ಜೀವನದ ಪ್ರಯಾಣದಲ್ಲಿ ಅಪಾರ ಜ್ಞಾನವನ್ನು ಕಲಿಸಿಕೊಟ್ಟ ಎಲ್ಲ ಗುರುಗಳ ಮಾರ್ಗದರ್ಶನದಿಂದ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಸಾರ್ಥಕ ಬದುಕು ನಡೆಸಲು ಎಲ್ಲ ಹಿರಿಯರು ನನಗೆ ಪ್ರೇರಣೆ. |‌ ಕೆ.ಯುವರಾಜ್‌, ಜನಪದ ಗಾಯಕ

ಅಕ್ಕನ ಬಳಗದ ಸದಸ್ಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಉದ್ಯಮಿಗಳಾದ ವೈ.ಪಿ.ಶಿವಕುಮಾರ್‌, ಎಸ್.ಆರ್.ಹರ್ಷ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎನ್‌.ಮಹಾರುದ್ರ, ಕುವೆಂಪು ವಿವಿ ಸಿಂಡಿಕೇಟ್‌ ಸದಸ್ಯೆ ಪ್ರೊ. ಕಿರಣ್‌ ದೇಸಾಯಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಬಸವರಾಜ ನೆಲ್ಲಿಸರ, ಪಂಚಾಕ್ಷರಿ, ಚನ್ನಬಸಪ್ಪ ನ್ಯಾಮತಿ ಉಪಸ್ಥಿತರಿದ್ದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಶಿವಮೊಗ್ಗ ಜಿಲ್ಲಾ ಘಟಕದ‌ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಜನಪದ ಗಾಯಕ ಕೆ.ಯುವರಾಜ ಅವರಿಗೆ ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಜನಪದ ಗಾಯಕ ಕೆ.ಯುವರಾಜ ಅವರು ಜನಪದ ಗಾಯನ ನಡೆಸಿಕೊಟ್ಟರು.

ಅಕ್ಟೋಬರ್‌ 23ರ ಭಾನುವಾರದ ಕಾರ್ಯಕ್ರಮ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿರುವ ಮೂರನೇ ದಿನದ ಜಿಲ್ಲಾ ವಿಚಾರ ಸಂಕಿರಣದಲ್ಲಿ ಅಕ್ಟೋಬರ್‌ 23ರಂದು ಸಂಜೆ 6ಕ್ಕೆ ಶ್ರೀಮತಿ ಶಕುಂತಲ ಶ್ರೀ ಎಸ್.ರುದ್ರೇಗೌಡರ ದತ್ತಿ ಕಾರ್ಯಕ್ರಮದಲ್ಲಿ ನಾಡೋಜ ಡಾ. ಗೊ.ರು.ಚನ್ನಬಸಪ್ಪ ಅವರು “ಮರಣವೇ ಮಹಾನವಮಿ” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುವರು. ಕುವೆಂಪು ವಿವಿ ಸಿಂಡಿಕೇಟ್‌ ಸದಸ್ಯೆ ಪ್ರೊ. ಕಿರಣ್‌ ದೇಸಾಯಿ, ಕೈಗಾರಿಕೋದ್ಯಮಿ ಡಿ.ಎಸ್.ಚಂದ್ರಶೇಖರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 6ಕ್ಕೆ ವಚನ ಗಾಯನ ಇರಲಿದೆ. ಉಪನ್ಯಾಸದ ನಂತರ 15 ನಿಮಿಷ ಪ್ರಶ್ನೋತ್ತರ ನಡೆಯಲಿದೆ.

digimalenadu

ಶಿವಮೊಗ್ಗ
error: Content is protected !!